Monday, July 29, 2019

ಬಿ ಟಿ ಎಸ್ ನಲ್ಲಿ....


ಬಿ ಟಿ ಎಸ್ ಬಸ್ನ ಲ್ಲಿ  ಪ್ರಯಾಣಿಸಿ ಸುಮಾರು ದಿನ(ವರ್ಷ)ಗಳೇ  ಆಗಿತ್ತು. ಇಂದು ಧೀರ್ಘ ಪ್ರಯಾಣವಲ್ಲದಿದ್ದರೂ, ರಾಜರಾಜೇಶ್ವರಿ ನಗರದಿಂದ ಮೈಸೂರು ರಸ್ತೆ ಮೆಟ್ರೊ ನಿಲ್ದಾಣದ ವರೆಗೆ ಸುವರ್ಣ ಸಾರಿಗೆ ಬಳಸುವ ಸುವರ್ಣಾವಕಾಶ
ಬಸ್ ಹತ್ತಿ ಟಿಕೇಟ್ ಪಡೆದ ನಂತರ ಕಿಟಕಿಯಾಚೆ ಕಣ್ಣು ಹರಿಯಿತು. ಮರು ಕ್ಷಣವೇ  ನಾ ಬಸ್ಸಿನಲ್ಲಿ ಗಂಟೆ ಗಟ್ಟಲೆ ಪ್ರಯಾಣಿಸುತ್ತಿದ್ದ ದಿನಗಳು ನೆನಪಾದವು. ಹನುಮಂತ ನಗರದಿಂದ ವೈಟ್ ಫೀಲ್ಡವರೆಗೆ!!! ಅದು ಇಂದಿನಂತೆ ಘಳಿಗೆಗೂಂದು ಬಸ್ ಬರುವ ಕಾಲವಲ್ಲ, ಗಂಟೆಗೊಂದು ಬಸ್ ಬಂದರೆ ಬಂದೀತು! ಬಹುತೇಕ ದಿನಗಳು ನಿಂತೇ ಪ್ರಯಾಣಿಸುತ್ತಿದ್ದೆ. ಅಪರೂಪಕ್ಕೆ ಸೀಟ್ ದೊರೆತರೆ, ವೈದೇಹಿ ಆಸ್ಪತ್ರೆಗೆ ಬರುವ ರೋಗಿಗಳಿಗೋ, ಮಾರುಕಟ್ಟೆಯಿಂದ ಹಿಂದಿರುಗುವ ವೃದ್ಧರಿಗೆ ಸೀಟ್ ತ್ಯಾಗ ಮಾಡಬೇಕಾಗುತ್ತಿತ್ತು. ಕೆಲವೊಮ್ಮೆ ಸ್ಥಳ ದೊರೆತಾಗ ಕಣ್ಣು ತೂಗಿ ಬಂದು ಎಂಥ ನಿದ್ದೆ! ಅದು ಪಕ್ಕಾ ಪವಕ್ ನ್ಯಾಪ್!! 
ನನ್ನ ಮಗಳು ಹುಟ್ಟದ್ದೇ ಸರಿ, ಬಸ್ ಪ್ರಯಾಣ ಬಹಳ ಮಟ್ಟಿಗೆ ಅಪರೂಪವಾಯ್ತು. ಅನಳ ನೆಪ ಮಾಡಿ ಬಸ್ ಹತ್ತುವುದನ್ನು ನಾನೆ ತಪ್ಪಿಸುತ್ತಿದ್ದೆ. ಹೀಗೆ  ರೂಢಿಯಾದಂತೆ ಮಗು ಜೊತೆಗಿಲ್ಲದಿದ್ದರೂ ಬಸ್ ಹಿಡಿಯಲು ಮನಸ್ಸು ತಕರಾರು ಮಾಡುತ್ತಿತ್ತು. ಮುಂಚೆ ಬಸ್ ಪ್ರಯಾಣ ಶಿಕ್ಷೆಯೆಂದು ಅನಿಸಿರಲೇ ಇಲ್ಲ. ಅದು ಅನಿವಾರ್ಯವಾಗಿತ್ತು
ಬಸ್ಸಿನಿಂದಲೇ ರಸ್ತೆಯ ಹೆಸರುಗಳು, ಅಂಗಡಿ ಫಲಕಗಳು, ಸಿನಿಮಾ ಪೋಸ್ಟರ್ ಗಳನ್ನು ನನ್ನ ಕಣ್ಣುಗಳು ನನಗರಿವಿಲ್ಲದಂತೆಯೇ  ಓದುತ್ತಿದ್ದವು ( ಅಭ್ಯಾಸ ಇಂದಿಗೂ ಇದೆ ). ಬೆಳಗಿನ ಬಸ್ ಚಿತ್ರಣ ಒಮ್ಮೆ ಮನಸ್ಸಿಗೆ ಬಂತು. ಬಸ್ ಮೇಲೆ ಫಲಕವಿದ್ದಕೂ ಕೇಳಿ ಬಸ್ ಹತ್ತು ವಿದ್ಯಾವಂತರು.. ಬೆಳಗಿನ ಹೊತ್ತು ಅಲಸೂರಿನ ಬಳಿ ಪುಟ್ಟ ತಂಗಿಯನ್ನು ಮುಂದಿನ ಬಾಗಿಲಲ್ಲಿ ಹತ್ತಿಸಿ ಹಿಂದಿನಿಂದ ಹತ್ತುವ ಪುಟ್ಟ ಅಣ್ಣಹೆಚ್ ಎಲ್ ಬಳಿ ಹತ್ತುತ್ತಿದ್ದ ಅಂಧ ಮಹಿಳೆ, ಅಪ್ಪ-ಅಮ್ಮನನ್ನು  ಅವರ ಸೀಟಿಗೆ ಬಿಟ್ಟು ಹಿಂದೆ ಹೋಗಿ ಟಿಕೆಟ್ ಕೊಂಡು ಕೂಗಿ ಅಪ್ಪನಿಗೆ ಹೇಳುವ ಮಗ, ಗಂಟು ಮೂಟೆ ಸಮೇತ ಸಾಯಿಬಾಬಾ ಆಸ್ಪತ್ರೆಗೆ ಬರುವವರು... ಸೀಟಿಗಾಗಿ ಜಗಳಾಡೋ ಹೆಂಗಸರು( ಅದೇನೋ ಸಿ ಎಮ್ ಸೀಟ್ ಥರ) ...ಅವರವರ ನಿಲುಗಡೆಯಲ್ಲಿ ಇಳಿಯಲು ಪರದಾಡೋ ಪ್ರಯಾಣಿಕರು...ಇದರ ಮಧ್ಧ್ಯೆ ಒಂದು ರೂಪಾಯಿ ಚಿಲ್ಲರೆಯನ್ನು ನೂರು ಬಾರಿ ಕೇಳಿ ಬೈಸಿಕೊಳ್ಳುವವರು....ಕಿಕ್ಕಿಕಿದ ಬಸ್ ನಲ್ಲಿ ದರ್ಪದಿಂದ ಕುಳಿತ ಲಾಸ್ಟ ಸ್ಟಾಪ್  ಪ್ರಯಾಣಿಕರು...ಅವರಿವರ ಪರ್ಸ ಕದ್ದು ಸಿಕ್ಕಿ ಹಾಕಿಕೊಂಡ ಜೇಬುಗಲಳ್ಳ....ಅದನೋಡಿ ಅವರವರ ಕಿಸೆ ಮುಟ್ಟಿ ಖಾತ್ರಿ ಮಾಡಿಕೊಳ್ಳುವವರು....ಇಷ್ಟೆಲ್ಲಾ ನಡೆಯುತ್ತಿದ್ದರೂ  ಕಿಟಕಿ ಕಡೆ ಕೂತು ತೂಕಡಿಸುವ ನನ್ನಂಥವರು...
ಅಷ್ಟಲ್ಲದೆ ಬಸ್ ಒಂದು ನ್ಯೂಸ್ ಚಾನಲಿಗಿಂತ ಕಡಿಮೆಯೇ ಇಲ್ಲ. ಇನ್ನು ಕೆಲವರ ಸಂಭಾಷಣೆಗಳಂತೂ ಅನನ್ಯ. ಭಾಷೆ ಗೊತ್ತಿಲ್ಲದಿದ್ದರೂ ತಮಿಳಿಗೆ, ಮಲಯಾಲಂಗೆ, ತೆಲುಗುಗೆ, ಹಿಂದಿಗೆ, ಕನ್ನಡ ಸೇರಿಸಿ ಮಾತನಾಡುವವರು... ಅಷ್ಟಕ್ಕೇ ಬಿಡದೆ ಇಂಗ್ಲೀಷಿನ ಒಗ್ಗರಣೆ ಹಾಕುವವರೂ

ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತ್ಯೇಕತೆ! ಭಾಂಧವ್ಯದ ಪಾಠ, ಅತಃಕರಣದ ಸಾಕ್ಷಿ, ಜವಾಬ್ದಾರಿಯ ಏಚ್ಚರಿಕೆ. ಹೀಗೆ  ಬಿ ಟಿ ಎಸ್ ಬಸ್ ಒಂದು ಅನುಭವಗಳ ಸಂತೆ. ಇಡೀ ಜೀವನದ ಒಂದು ವಿಶ್ವರೂಪ ದರ್ಶನ. ಸಾಮಾಜಿಕ  ಜೀವನದ ಸೂಕ್ಷ್ಮಗಳ ನಿದರ್ಶನ. ಈಗ ಕಾರುಗಳಲ್ಲಿ ಪ್ರಯಾಣಿಸಿದರೆ  ಪಾರ್ಕಿಂಗ್ನ  ಚಿಂತೆ, ಬೈಕ್ನಲ್ಲಿ ಹೊರಟರೆ ಅಪಘಾತಗಳ ಅಪಾಯ, ಕ್ಯಾಬ್ ಅಥವ ಆಟೋ ಏರಿದರೆ ಸುರಕ್ಷತೆಯ ಚಿಂತೆ. ನಿಶ್ಚಿಂತೆಯಿಂದ ಪ್ರಯಾಣಿಸಲು ಬಸ್ಸೇ ಸೂಕ್ತ-ಸುರಕ್ಷಿತ