Tuesday, December 3, 2019

ದೇವರ ದಾಕ್ಷಿಣ್ಯ




ಕಾರ್ತೀಕ ಮಾಸದ ಕೊನೆ ಸೋಮವಾರವೆಂದು ಈಶ್ವರನ ದರ್ಶನಕ್ಕೆ ಮನೆ ಬಳಿಯ ಗುಡಿಗೆ ಹೋಗಿದ್ದೆ. ಸೋಮವಾರವಾದ ಕಾರಣ ಜನ ಜಂಗುಳಿ ಇಲ್ಲ. ಇರುವ ಭಕ್ತರನ್ನು ಸಾಲಾಗಿ  ದರ್ಶನ ಮಾಡುವ ವ್ಯವಸ್ಥೆ ಮಾಡಿದ್ದರು. ಈಶ್ವರನನ್ನು ಕಣ್ತುಂಬಿತೊಂಡು, ಒಂದು ಪ್ರದಕ್ಷಿಣೆ ಹಾಕಿ, ಅಲ್ಲೇ ಮೂಲೆಯಲ್ಲಿ ಕುಳಿತೆ. ಬಾಯಿ ಶಿವ ಪಂಚಾಕ್ಷರಿ ಪಠಿಸುತ್ತಿದ್ದರೂ ನನ್ನ ಕಣ್ಣು ಸುತ್ತಲೂ ಗಮನಿಸುತ್ತಿತ್ತು. ನಾ ಕುಳಿತ ಬಲಗಡೆ ಮೂಲೆಯಲ್ಲಿ ಭಾರೀ ಜನ! ಪ್ರಸಾದಕ್ಕಿರಬಹುದೆಂದು ಎದ್ದು ನಾನುೂ ಸಾಲು ಸೇರಿದೆ. ಸಾಲು ಮುಂದೆ ಸಾಗುತ್ತಿದ್ದಂತೆ, ಬರಿಗೈಯಲ್ಲಿ ಬರುವವರ ನೋಡಿ ಪ್ರಸಾದದ ಸಾಲಲ್ಲವೆಂದು ಖಚಿತವಾಯಿತು. ಕುತೂಹಲ ಬಿಡದೆ ಮುಂದೆ ಹೋಗಿ ನೋಡಿದರೆ....ನಾಡಿ ಶಾಸ್ತ್ರ ಹೇಳುವ ಹಿಮಾಲಯದ  ಸನ್ಯಾಸಿ!! ತಕ್ಷಣ  ಅಮ್ಮ ಹೇಳಿದ ಗಾದೆಶಿವ ಕೊಡದಿದ್ದು ಸಿಂಗಲೀಕ ಕೊಡ್ತಾನೆ?” ಮನಸ್ಸಿನಲ್ಲಿ ಮೂಡಿ ನಗು ಬಂತು. ಓಂಕಾರೇಶ್ವರ ದೇವಾಲಯದಲ್ಲಿ ೧೨ ಜ್ಯೋತಿರ್ಲಿಂಗಗಳೂ ಪ್ರತಿಷ್ಠಾಪನೆ ಮಾಡಿದ್ದಾರೆ. ಮುಖ್ಯ ದೇವರು ಓಂಕಾರೇಶ್ವರ. ಅದ್ಭುತವಾದ ಅಲಂಕಾರ. ಮೆಲು ದನಿಯಲ್ಲಿಓಂ ನಮಃ ಶಿವಾಯತೇಲಿ ಬರುತ್ತಿತ್ತು
ಇಷ್ಟಾದರೂ ಶಿವನನ್ನು ಪ್ರಾರ್ಥಿಸುವುದು ಬಿಟ್ಟು ಸನ್ಯಾಸಿಯ ಬಳಿ ಶಾಸ್ತ್ರ ಕೇಳುವುದೆಂತು? ಅದೇನು ಸಮಸ್ಯೆ ಇದ್ದರೂ ಈಶ್ವರನ ಕೃಪೆ ಇಲ್ಲದೆ ಬಗೆಹರಿಯುವುದೇ? ಅಸಲು ತನ್ನ ಸಂಸಾರದ ರಗಳೆಯೇ ಬೇಡವೆಂದು ಹಿಮಾಲಯಕ್ಕೆ ಹೋಗಿ ಸನ್ಯಾಸಿಯಾದವನಿಗೆ, ಇವರೆಲ್ಲರ ಸಮಸ್ಯೆ ಬಗೆಹರಿಸುವ ಉಸಾಬರಿ ಯಾಕೆ? ಇಷ್ಟಕ್ಕೂ ಇವರ ಕಷ್ಟಗಳೇನಿರಬಹುದು? ಹೀಗೆ ನನ್ನ ತರ್ಕ ಸಾಲಿನಲ್ಲಿ ನಿಂತವರನ್ನು ಮಾತಾಡಿಸಿತು. ಒಬ್ಬಾಕೆ ಇಂಜಿನೀಯರಿಂಗ್ ಓದಿರುವ  ಮಗಳಿಗೆ ಕೆಲಸ ಸಿಕ್ಕಿಲ್ಲ ಎಂದಳು, ಮತ್ತೊಬ್ಬರು ೩೮ ವರ್ಷದ ಮಗನಿಗೆ ಮದುವೆ ಗೊತ್ತಾಗಿಲ್ಲ ಎಂದಳು. ಇನ್ನೊಬ್ಬ ತಾತ ದೇವರು ನಮ್ಮನ್ನ ಸುಖವಾಗಿ ಇಡಲಿಲ್ಲ ಅಂತ ನೇರವಾಗಿ ದೂರಿದ. ತಾತನ ಟೀಕೆ  ಸ್ವಲ್ಪ ನನ್ನಲ್ಲಿ  ಆಸಕ್ತಿ ಮೂಡಿಸಿ  ಮಾತು ಮುಂದುವರೆಸಿದೆ. ಬಂದ ಕೆಲಸ ಮುಗಿಸಿ ಮನೆಗೆ ಹೊರಡೆಂದು ಮನ ಎಚ್ಚರಿಸುತ್ತಿದ್ದರೂ ಅಲಕ್ಷಿಸಿನಿಮ್ಮದು ಯಾವೂರು?”  ಎಂದು ಸಂಭಾಷಣೆ ಶುರುವಾಯ್ತು! ಮುಂದುವರೆದ ಸಂಭಾಷಣೆಯಲ್ಲಿ ತಾತ ಹೇಳಿದ್ದು, “ನಾವು ಜೀವನ್ದಲ್ಲಿ ಭಾರೀ ಕಷ್ಟ ಪಟ್ವಿ , ಆದರೂ ದೇವ್ರು ಸುಖ ಕೊಡಲಿಲ್ಲ, ನನಗೆ ಮೂರು ಮಕ್ಕಳು. ದೊಡ್ಡೋನು ಬ್ಯಾರೆ ಹೋಗ್ತೀನಿ ಅಂದ ಬಾಗ ಬಿಸಾಕ್ದೆ , ಮಗಳ ಸಂಸಾರವೂ ಚನ್ನಾಗಿಲ್ಲ, ನಾವೂ ಒಳ್ಳೆ ಕಡೆ ನೋಡಿ ಮದ್ವೆ ಮಾಡ್ಲಿಲ್ಲ ಬಿಡಿ....ಸಣ್ಣೋನ್ ಬಂದ್ ಬೆಂಗ್ಳೂರ್ ಸೇರ್ಕಂಡ...ಯಾರ್ನೋ ಮದ್ವೆ ಆಗವ್ನಂತೆ!! ಇನ್ನು ನಮಗೂ ಹಾರ್ಟ ಪ್ರಾಬ್ಲಂ! ನಮ್ಮ ಹೆಂಡತೀಗೂ ಹಾರ್ಟ ಪ್ರಾಬ್ಲಂ”. ಇವರ ತೊಂದರೆಗಳ ಪಟ್ಟಿ ಕೇಳಿ ಬೇಜಾರಾದ್ರೂ ...ಇದ್ರಲ್ಲಿ ದೇವರ ಕಿತಾಪತಿ ಎಲ್ಲಿ ಅಂತ ತರ್ಕ ಶುರುವಾಯ್ತು. ಆದರೂನಿಮಗ್ಯಾಕೆ ಹೃದಯದ ತೊಂದರೆ? ಮಕ್ಕಳದೇ ಚಿಂತೆ ಮಾಡಬಾರ್ದು. ನಿಮ್ಮ ಕರ್ತವ್ಯ ನೀವ್ ಮಾಡಿದಿರಿ, ಮಕ್ಕಳು ಅಲಕ್ಷ ಮಾಡಿದ್ರೇನು ನಿಮ್ಮಹೆಂಡ್ತೀನ ನೀವೇ ಚನ್ನಾಗಿ ನೋಡ್ಕೋಬಹುದುಎಂದು ಸಮಾಧಾನ ಮಾಡಲು ಯತ್ನಿಸಿದೆ
 ಆತಅಯ್ಯೋ ನಮಗೀಗ ಬುದ್ದಿ ಬಂದದೇ...ವಯಸ್ನಾಗಿದ್ದಾಗ ನಾವು ಡ್ರಿಂಕ್ಸ ಮಾಡ್ತಿದ್ವಿ...ಆವಾಗವಾಗ ಬೀಡಿ ಅಭ್ಯಾಸನೂ ಇತ್ತು...ಏನಾದ್ರೇಳಿ ದೇವ್ರಿಗೆ ದಯೆ ಇಲ್ಲ... ವಯಸ್ನಾಗೆ ಆಸ್ಪತ್ರೆ ಅಲೆಯೋ ಹಾಗೆ ಮಾಡ್ದಅಂದರು. ಇನ್ನೂ  ನಾಡಿ ಶಾಸ್ತ್ರದ ಸಾಲಿನಲ್ಲೇ ಇದ್ದ ನನ್ನನ್ನು ಆತನಿಮ್ದು ಏನು ಸಮಸ್ಯೆ?” ಎಂದರು. ನಾನುಬರುವಾಗ ಗಾಡೀಲ್ ಬಂದಿಲ್ಲ...ಈಗ ಆಟೋ ಸಿಗುತ್ತೋ ಇಲ್ಲವೋ ಅದೇ ಸಮಸ್ಯೆ, ನಾ ಬರ್ತೀನಿ ಯಜಮಾನ್ರೆ...ನೀವು ಕೂತ್ಕೊಳ್ಳಿ...ಜನ ಜಾಸ್ತಿ ಇದಾರೆಎಂದು ಇಳಿದು ಬಂದೆ. ನನ್ನ ನಿರೀಕ್ಷೆಯಂತೆಯೇ ಆಟೋಗಳ ಸುಳಿವಿಲ್ಲ!! ಪೋನ್ನಲ್ಲಿ ನೆಟ್ವರ್ಕ ಇಲ್ಲ..! ಸರಿ ನಡೆದೇ ಮನೆ ಸೇರೋಣೆಂದು ಹೊರಟೆ. ನನ್ನ ಹಿಂದೆಯೇ ತಾತನೂ ಇಳಿದು ಬರುತ್ತಿದ್ದದ್ದನ್ನು ಗಮನಿಸಿ ನಿಂತೆ
ನಮ್ಮ ಕಥೆ ಕೇಳಿ ನಿಮಗೆ ಬೇಜಾರಾಯ್ತೇನೋ..ಏನನ್ಕ ಬೇಡಿ... ಏನೋ ಸಂಕಟ ಮಾತಾಡಸ್ತುಅಂದರು. ನಾನುಬೇಜಾರೇನಿಲ್ಲ...ಆದ್ರೂ ನೀವೇಳಿದ್ದಕ್ಕೆ ಹೇಳ್ತೀನಿ...ನಿಮ್ಮ ಕಷ್ಟಾನೆಲ್ಲಾ  ಸನ್ಯಾಸಿ ಬಗೆಹರಿಸಲ್ಲ...ಕುಡಿತ-ಬೀಡಿ ಅಭ್ಯಾಸ ಇರೋರ್ಗೆಲ್ಲ ಆರೋಗ್ಯ ಸಮಸ್ಯೆ ಬರುತ್ತೆ...ನೀವು- ನಿಮ್ಮಕ್ಕಳು ಕೊಟ್ಟಿರೋ ಟೆನ್ಷನ್ಗೆ ಯಾವ ಚಟನೂ ಇಲ್ಲದ ನಿಮ್ಮ ಹೆಂಡ್ತೀಗೂ ಸಮಯ್ಯೆ ಬಂದಿದೆ...ಇಲ್ಲಿ ದೇವರದೇನೂ ಕೈವಾಡ ಇಲ್ಲ. ಸಾಧ್ಯ ಆದರೆ ಮಗಳನ್ನ ಕರ್ಕೊಂಡು ಬಂದು ಮನೇಲಿಟ್ಕೊಳ್ಳಿ...ಹೇಗೂ ಆಕೆ ಸಂಸಾರ ಸರಿ ಇಲ್ಲಾಂದ್ರಿ...ನಿಮಗೂ ವಯಸ್ನಲ್ಲಿ ಮಕ್ಕಳಾಸ್ರೆ ಬೇಕು ಆಕೆಗೂ ನಿಮ್ಮ ಬೆಂಬಲ ಬೇಕು  ಎಂದು ಮಾತು ಮುಗಿಸಲು ಯತ್ನಿಸಿದೆ”. ಆತಹಂಗಂತೀರಾ....ನಮ್ಮ ಕೈಲೇ ಎಲ್ಲಾ ಇದ್ರೆ ದೇವರ ದಾಕ್ಷಿಣ್ಯ ಯಾಕೆ ?”ಅಂದ್ರು. ಅವರ ಪ್ರಶ್ನೆಗೆ ನನ್ನ ಕಿರು ನಗುವೇ ಉತ್ತರವಾಯ್ತು...ಅವರೂ ನಕ್ಕು ಮತ್ತೆ ದೇವಸ್ಥಾನಕ್ಕೆ ಹೊರಟರು. ನಾ ನಡೆದು ಮನೆ ಸೇರಿದೆ.




Thursday, September 26, 2019

ನನ್ನ ಮಗ ಮುಂದೆ ಏನಾಗ ಬೇಕು?

ನನ್ನ ಮಗ ಮುಂದೆ ಏನಾಗ ಬೇಕು? 
ಏಕೋ ಅಂದು ನನ್ನ ಮಗ ದೊಡ್ಡವನಾದ ಮೇಲೆ ಏನಾಗ ಬೇಕೆಂಬ ಜಿಜ್ಞಾಸೆ ನನ್ನನ್ನು ಕಾಡಿತು. ಅವನು ಸಾಫ್ಟವೇರ್ ಇಂಜಿನೀರ್ ಆದರೆ ಚೆನ್ನ,...ಆದರೆ ಖಾಸಗಿ ಕಂಪನಿ ಕೆಲಸ...ಅದೊಂಥರ ಜೀತ.....ಬಿಡುವಿಲ್ಲದ ಕೆಲಸ....ಅಯ್ಯೋ ಐಟಿ ಸಹವಾಸವೇ ಬೇಡ; ವೈದ್ಯ ನಾದರೆ ಜನರ ಜೀವವಾದರೂ ಉಳಿಸುತ್ತಾನೆ, ಸಂಪಾದನೆಗೂ ಧಕ್ಕೆ ಇಲ್ಲ...ಆದರೆ ...ಬೇಡ .. ಕಾಲದಲ್ಲಿ ಖಾಯಿಲೆಗಳಿಗೇನು ಕಮ್ಮಿ ಇಲ್ಲ.....ದಿನ ಬೆಳಗಾದರೆ ರೋಗಿಷ್ಠರ ಕಥೆಗಳ ಕೇಳಿ-ಕೇಳಿ ಜೀವನವೇ ಜಿಗುಪ್ಸೆ ಬರುತ್ತದೆ. ಸೈನಿಕನಾದರೇನೆ ಒಳಿತು....ದೇಶ ಕಾಯುವ ಕೆಲಸವೇ ಸರಿ!! ಅವನಿಗೂ ಅದೇ ಇಷ್ಠ.....ಆದರೆ ಜೀವ  ಭಯ! ಅದನ್ನು ಊಹಿಸಲೂ ಅಸಾಧ್ಯ ...ಸೈನಿಕ ನಾಗುವುದೇನು ಬೇಡಪ್ಪ...ನನ್ನ ಮಗ ನನ್ನ ಕಣ್ಣ ಮುಂದೇ ಇರಲಿ. ಬೇಕಾದರೆ  ಯಾವುದಾದರೂ ಸರ್ಕಾರಿ ನೌಕರಿ ಹಿಡಿಯಲಿ ಅದೂ ದೇಶ ಸೇವೆಯೇ! ಸರ್ಕಾರಿ ಕೆಲಸ ಮಾಡೋದೇನೂ  ಸುಲಭ ಅಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ಸರಿ ಇಲ್ಲಾಂದ್ರೆ ಅದೆಂಥ ದೇಶ ಸೇವೆ? ಅದಿಕ್ಕೆ ಬೇಡ ಬಿಡು ಅವನೆಲ್ಲಾದರೂ ನಾಲ್ಕು ಮಕ್ಕಳಿಗೆ ಪಾಠ ಹೇಳೋ ಮೇಷ್ಟ್ರಾಗಲಿ. ವರ್ಷಕ್ಕೆ ಎರಡು ತಿಂಗಳು ರಜಾನೂ ಸಿಗುತ್ತೆ.....ಹಾಗೆ ಸಂಜೆ ಹೊತ್ತಿಗೆ ಮನೇನೂ ಸೇರ್ತಾನೆ. ಆದರೆ ಸಂಪಾದನೆ ಕಮ್ಮೀ ಅಲ್ವಾ? ನಾಳೆ ಬೆಳಿಗ್ಗೆ ಹೆಂಡ್ತಿ ಮಕ್ಕಳನ್ನ ಹೇಗೆ  ನಿಭಾಯಿಸ್ತಾನೆ? ಮೇಷ್ಟ್ರ ಆಗೋಕಿಂತ ಪೌರೋಹಿತ್ಯನೇ ವಾಸಿ... ಸಂಪಾದನೆ ತೆಗದಾಕೋ ಹಾಗೇನಿಲ್ಲ....ಟಾಕ್ಸ್ ಕೂಡ ಕಟ್ಟೋ ಅಷ್ಟಿಲ್ಲ. ಆದರೆ ಮದುವೆಗೆ  ಹುಡುಗಿ ಸಿಗೋದು ಕಷ್ಟ.... ಕಾಲದಲ್ಲೇ ಹೀಗೆ...ಇನ್ನು ಅವನ ಕಾಲಕ್ಕೆ! ಅಯ್ಯೋ ಬೇಡ ಬಿಡು ಮನೆ ಮಟ್ಟಕ್ಕೆ ಪೂಜೆ ಮಾಡೋದು ಕಲಿತರೆ ಸಾಕು
ಹೀಗೆ ನನ್ನ  ಮನಸ್ಸು ಮಾಧ್ಯಮ, ಸಂಗೀತ, ರಾಜಕೀಯ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಪರಾಮರ್ಷಿಸಿದರೂ ಯಾವ ಉದ್ಯೋಗವೂ ಸೂಕ್ತವೆನಿಸಲಿಲ್ಲಅವನನ್ನೇ  ಕೇಳಿದೆ. ಆಗ ಅವನ ಗಮನವೆಲ್ಲಾ ಕೈಲಿದ್ದ ಐಪ್ಯಾಡ್ ಮೇಲಿತ್ತು, ಅವನು ಉತ್ತರಿಸಲಿಲ್ಲ. ಎರಡನೇ ಕ್ಲಾಸಿನಲ್ಲಿ ಓದುತ್ತಿರುವ ಅವನಿಗೇನು ಗೊತ್ತು ಎಂದು ನನಗೆ ನಾನೇ ಹೇಳಿಕೊಂಡು ರಾತ್ರಿ ಊಟದ ತಯಾರಿಗೆ ಹೊರಟೆ. ಮಕ್ಕಳಿಂದ ಐಪ್ಯಾಡ್ ಕಸಿದು ಓದಲು ಹೇಳಿದೆ. ಸಾಮಾನ್ಯವಾಗಿ ಆಗ ಶಾಲೆಯಲ್ಲಿ ಏನೇನು  ನಡೆಯಿತೆಂದು ವರದಿ ಮಾಡುವ ಸಮಯ.
 ನನ್ನ ಮಗಳ ಸರದಿ ಮೊದಲು. “ ಅಮ್ಮಾ ಅಭಿ ಮೂರು ದಿನದಿಂದ ಯಾರೊಂದಿಗೂ ಆಡುತ್ತಿಲ್ಲ. ಸುಮ್ಮನೆ ಮೈದಾನದ ಮರದ ಕೆಳಗೆ ಕೂತಿರುತ್ತಾನೆಎಂದು (ಇಂಗ್ಲೀಷ್ ನಲ್ಲಿ) ಚಾಡಿ ಹೇಳಿದಳು
ಇನ್ನು ವಿಚಾರಿಸುವುದು ನನ್ನ ಸರದಿ. “ಯಾಕೋ ಏನಾಯ್ತು?” ಗೆಳೆಯರೊಂದಿಗೆ ಜಗಳವಿರಬಹುದೆಂಬ ಊಹೆಯಿಂದ ಕೇಳಿದೆ
 ಅದಕ್ಕವನುಏನಿಲ್ಲಮ್ಮ I was thinking about something” ಎಂದ
ಮತ್ತೆ ನಾನು ಉದಾಸೀನತೆಯಿಂದ “ಹೋ ಭಾರಿ! ಏನದು?” 
ಅವನು “ I want to become something that honours my country”, ಅದನ್ನೇ ಮೂರು ದಿನದಿಂದ ಯೋಚನೆ ಮಾಡ್ತಿರೋದು.  
ಕ್ಷಣ ನನಗೆ ರೋಮಾಂಚನವಾಯ್ತು. ಅಭಿಮಾನದ ಕಣ್ಣೀರು ನನಗರಿವಿಲ್ಲದಂತೆಯೇ ಉಕ್ಕಿತು.ಅವನ ಬಾಚಿ ತಬ್ಬಿ ಮುದ್ದಿಸಿದೆ. ಅಮ್ಮನಿಗೂ ಫೋನಾಯಿಸಿ ಅಭಿಮಾನ ಹಂಚಿಕೊಂಡೆ. ಬೆಳಗಿನ ನನ್ನ ಆಲೋಚನೆಯನ್ನೂ ಚರ್ಚಿಸಿದೆ. ಅಮ್ಮನೂ ಹೆಮ್ಮೆಯಿಂದ ದೇಶಕ್ಕೆ ಹೆಸರು ತರೋನು ಮನೆಗೆ ಹೆಸರು ತರಲ್ವೇಈಗಲಿಂದ ನಿನಗ್ಯಾಕೆ ಚಿಂತೆ? ಎಳಗರಂ ಎತ್ತಾಗದೆ? ಎಂದಳು. ಬೆಳಿಗ್ಗೆಯಿಂದ  ನನ್ನ ಕಾಡಿದ ಜಿಜ್ಞಾಸೆಗೆ ಉತ್ತರ ಸಿಕ್ಕಿತ್ತು. ನನ್ನ ಸಂಕುಚಿತ ಯೋಚನೆಗಳ ಬಗ್ಗೆ ಬಹಳ ಬೇಸರವಾಯಿತು. ಅವನು ಹೇಳಿದ್ದೇ ಸರಿ. ದೇಶಕ್ಕೆ ಗೌರವ ತರುವ ಯಾವ ಕೆಲಸವಾದರೇನು? ಕಗ್ಗದಲ್ಲಿ ಹೇಳಿರುವಂತೆ..
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು -ಮಂಕು ತಿಮ್ಮ।।