Tuesday, December 23, 2025

ಸರಸ್ವತಿ

 ಅಂಬಿತಮೆ.. ನದಿತಮೆ ..ದೇವಿತಮೆ ..ಸರಸ್ವತಿ ಎಂಬ ಶ್ಲೋಕದಿಂದ ಇಂದಿಗೂ ಪೂಜೆ ಪುನಸ್ಕಾರಗಳಲ್ಲಿ ಪ್ರಸ್ತುತವಾಗಿರುವ, ಋಗ್ವೇದದಲ್ಲಿ ಉಲ್ಲೇಖಿತವಾದ ಸರಸ್ವತಿ ನದಿ ಈಗಿಲ್ಲ. ಮಾಯವಾಗಿದೆ. ಮಹಾಭಾರತವನ್ನು ವೇದವ್ಯಾಸರು ಹೇಳುತ್ತಿರುವಾಗ ಗಣೇಶ ಅದನ್ನು ಬರೆಯುತ್ತಿದ್ದಂತೆ, ಸರಸ್ವತಿ ನದಿಯ ಆರ್ಭಟ ವಿಪರೀತವಾಗಿ ಗಣೇಶನಿಗೆ ಕಥೆಯಲ್ಲಿ ಕೇಂದ್ರೀಕರಿಸಲು ಕಷ್ಟವಾಗುತ್ತಿತ್ತಂತೆ. ಆಗ ಗಣೇಶನು ಸರಸ್ವತಿ ನದಿಗೆ ನಿಶ್ಶಬ್ದವಾಗಿ ಹರಿಯಲು ಶಾಪ(ಆಜ್ಞೆ) ಕೊಟ್ಟನಂತೆ. ಆಗಿಂದ ಸರಸ್ವತಿ ಗುಪ್ತ ಗಾಮಿನಿಯಾದಳಂತೆ!! ಮತ್ತೆಲ್ಲೋ ರಾಜಸ್ಥಾನದ ರಾಜನೊಬ್ಬನ ಶಾಪಕ್ಕೆ ಗುರಿಯಾಗಿ ಮಾಯವಾದಳಂತೆ. ಹೀಗೆ ಕಾರಣಗಳೆಷ್ಟೋ/ ಕಾರಣಗಳೇನೋ ಅಂತೂ ಈಗ ಸರಸ್ವತಿ ಇಲ್ಲ. ಸಿಂಧುನದಿಗೆ ಸಮಾನಾಂತರದಲ್ಲೊಂದು ನದಿಯ ಜಾಡು ಕಾಣಿಸಿದರೂ ಅದೇ ಸರಸ್ವತಿ ಎಂಬುದನ್ನು ಸಾಬೀತುಪಡಿಸಲು ಅನೇಕ ಸಂಶೋಧನೆಗಳು ನಡೆದವು. ಸರಸ್ವತಿ ನದಿ ಇತ್ತು ಎಂದು ಜಗತ್ತಿಗೆ ಸಾಬೀತುಪಡಿಸುವ ಹಿನ್ನೆಲೆಯಲ್ಲಿ ಬಹಳಷ್ಟು ಸಂಶೋಧನೆಗಳು ಬ್ರಿಟಿಷರಿಂದಲೇ ಮೊದಲುಗೊಂಡಿದೆ. ಸರಸ್ವತಿಯ ತೀರದುದ್ದಕ್ಕೂ ನಾಗರಿಕತೆಯ ಕುರುಹುಗಳನ್ನು ಹೊರತೆಗೆದಿದ್ದಾರೆ. ಪ್ರವಾಹದ ನಂತರ ಅಳಿದುಳಿದ ಸಿಂದೂಬಯಲಿನವರು ಸರಸ್ವತಿ ನದಿ ಬಯಲಿಗೆ ಗುಳೇ ಬಂದಿರಬಹುದೆಂದು ಊಹಿಸಿದ್ದಾರೆ

ಪ್ರಕೃತಿಯ ವಿಕೋಪದಿಂದ ಸರಸ್ವತಿ ನದಿಯ ನೀರೆಲ್ಲಾ ಯಮುನೆಯ ಕಡೆಗೆ ಹರಿದಿದೆಯಂತೆ, ಸಟ್ಲೆಜ್ ಗೂ ಹರಿದಿರಬಹುದಂತೆ. ಸಂಶೋಧನೆಗಳೆಲ್ಲಾ ನಿರಂತ ನಡೆಯುತ್ತಿದ್ದರೂ ಸರಸ್ವತಿ ನದಿಯು ಇತ್ತು ಎನ್ನುವುದನ್ನೇ ಸಾಬೀತುಪಡಿಸಲು ಯತ್ನಿಸುತ್ತಿದೆಯೇ ಹೊರತು ಅವಳ ಅನುಪಸ್ಥಿತಿಗೆ ಸಮಂಜಸವಾದ ಕಾರಣ ಕೊಡುತ್ತಿಲ್ಲ, ಹಿಮಾಲಯದ ಶಿವಾಲಿಕ್ ಶ್ರೇಣಿಯಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿದು ಗುಜರಾತ್ ಬಳಿ ಸಾಗರ ಸಂಗಮವಾಗುತ್ತಿದ್ದ ನದಿ ಕಳೆದು ಹೋಗಿದೆ. ಕಚ್ ನಲ್ಲಿ ಮರುಭೂಮಿ ಅಗೆದರೆ ಫಲವತ್ತಾದ ಮಣ್ಣು ಸಿಕ್ಕಿದೆಯಂತೆ, ನಮ್ಮ ಸರಸ್ವತಿ ಅಲ್ಲಿವರೆಗೂ ಹರಿದಿದ್ದಕ್ಕೆ ಸಾಕ್ಷಿ ಇದೇ. ಅದಲ್ಲದೆ ಹರಪ್ಪ ನಾಗರಿಕತೆಯಲ್ಲಿನ ಮತ್ತು ಸಿಂದೂ ಬಯಲಿನ ಊರುಕೇರಿಗಳು ಹಾಳಾದದ್ದು ಸಿಂದೂ ನದಿ ಪ್ರವಾಹದಿಂದಲೇ. ಹಾಗಿದ್ದರೆ ಸಿಂದೂ ನದಿಗೆ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಲು ಕಾರಣವೇನು? ಕಾಲಕ್ಕೆ ಭೂಗರ್ಭದಲ್ಲಾದ ಕಂಪನದಿಂದ ಸರಸ್ವತಿಯ ನೀರೆಲ್ಲ ಸಿಂದೂ ನದಿಗೂ ಸೇರಿ ಪ್ರವಾಹವಾಗಿರಬಹುದೇನೋ!! ಹೀಗೆ ನೋಡಿದರೆ ಸರಸ್ವತಿಯ ನೀರು ಮತ್ತಿತರ ಉಪನದಿಗಳಿಗೂ ವಿಭಜನೆಯಾಗಿರಬಹುದುನಂತರದ ದಿನಗಳಲ್ಲಿ ಮಳೆಯನ್ನೆ ಅವಲಂಬಿಸಿರಬಹುದು,ಮುಂಗಾರು ಆಗ ಕೈಕೊಟ್ಟು ನದಿ ಬತ್ತಿ ಹೋಯಿತೇನೋ!! ಈಗಿರುವ ಗಾಗ್ರಾ ಹಕ್ಕರ್ ಎನ್ನುವ ಮಳೆಗಾಲದ ನದಿಯೇ ಸರಸ್ವತಿನದಿಯೇ?

ಋಗ್ವೇದದಲ್ಲಿ ಸುಮಾರು ಎಪ್ಪತೈದು  ಶ್ಲೋಕಗಳಲ್ಲಿ ಬಣ್ಣಿಸಲ್ಪಡುವ ಸರಸ್ವತಿಯ ಇರುವಿಕೆಯನ್ನು ಮತ್ತೂ  ಸಾಬೀತುಪಡಿಸಲು ಶತಮಾನಗಳ ಪ್ರಯತ್ನವೊಂದು ವಿಪರ್ಯಾಸ. ಮಹಾಭಾರತದಲ್ಲಿ ಕೂಡ ಬಲರಾಮ ಗೋಹತ್ಯಾ ಪಶ್ಚಾತ್ತಾಪಕ್ಕೆ ಸರಸ್ವತಿ ನದಿಯುದ್ದಕ್ಕೂ ಹಿಮಾಲಯದವರೆಗೆ  ತೀರ್ಥಯಾತ್ರೆ ಮಾಡಿದ್ದನೆಂದು ಹೇಳಿದೆ.   ತಾನೇಶ್ವರ ಬಳಿಯಲ್ಲಿರುವ ಕುರುಕ್ಷೇತ್ರದ ಬ್ರಹ್ಮ ಕುಂಡದಲ್ಲಿ ಬಲರಾಮ ಗೋಹತ್ಯಾ ಪಶ್ಚಾತ್ತಾಪ ಮಾಡಿಕೊಂಡಿದ್ದಾನೆಂದು ಓದಿದ್ದೇನೆ. ಸರಸ್ವತಿ ತೀರ್ಥೋದ್ಭವ ಬ್ರಹ್ಮಕುಂಡದಲ್ಲಿ ಆಗುತ್ತದೆಂದು ಅಲ್ಲಿನ ಸುತ್ತಮುತ್ತಲಿನವರು ನಂಬಿದ್ದಾರೆ. ಬದರಿಯಮಾನ ಹಳ್ಳಿಯಲ್ಲಿವ್ಯಾಸಗುಹೆಯ ಪಕ್ಕದಲ್ಲೇ ಸರಸ್ವತಿ ಭೋರ್ಗರೆಯುತ್ತಾಳೆ... ಸರಸ್ವತಿ ಇದ್ದಳು ಎಂದರೆ? ಇದ್ದಾಳಲ್ಲಾ?  (ಅಲಕಾನನಾದ ನದಿ ಸೇರಿ ಕೊನೆಗೆ ಗಂಗೆಯನ್ನೇ ಸೇರುತ್ತಾಳೆ) ಹರಿವು ಪ್ರಕೃತಿ ವಿಕೋಪದಿಂದಲೇ ಏರುಪೇರಾಗಿರಬಹುದಷ್ಟೇ. ಸರಸ್ವತಿ ನದಿ ಎಲ್ಲೆಲ್ಲಿ ಹರಿದಳೆಂಬುದಕ್ಕೆ ಸಂಶೋಧನೆ ಪ್ರಸ್ತುತವೇ ಹೊರತು ಅವಳು ಇರಲೇ ಇಲ್ಲ ಊಹಾಪೋಹದ ನದಿಎಂದರೆ?

ಕೆಳಗಿನ ನದಿಸೂಕ್ತ ಶ್ಲೋಕದಲ್ಲಿ 

ಇವಂ ಮೇ ಗಂಗೇ ಯಮುನೇ ಸರಸ್ವತಿ ಶತುದ್ರು ಸ್ತೋಮಮ್  ಸಚತಾ ಪರುಷ್ಣಿಯಾ

ಆಸಿಕ್ನಿಯ ಮರುದ್ವೃಧೇ ವಿಟಸ್ಥಯಾರ್ಜಿಕಿಯೇ ಶೃಣುಹ್ಯಾ ಸುಶೋಮಯಾ

ಸರಸ್ವತಿಯು ಗಂಗೆ ಯಮುನೆ ಶತುದ್ರು (ಸಟ್ಲೆಜ್) ಪರುಷ್ಣಿ(ರವಿ) ಆಸಿಕ್ನಿ (ಚೆನಾಬ್) ಮರುದ್ವೃಧೇ (ಮರುವರ್ಧವ) ವಿಟಸ್ಥ(ಜೆಲುಮ್ಅರ್ಜಿಕೆಯ ಮತ್ತು ಸುಶೋಮ ನದಿಗಳ ಜೊತೆಯಲ್ಲಿ ಉಲ್ಲೇಖಿಸಲ್ಪಟ್ಟಿದ್ದಾಳೆ. ಬೇರೆಲ್ಲಾ ನದಿಗಳು ಪ್ರಸ್ತುತವಾಗಿರುವಾಗ ಸರಸ್ವತಿಯೂ ಇದ್ದಳು ಎಂದು ಸಂಶೋಧನೆಯಿಂದ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ. ಇರಲಿ ಭಾರತದ ಪುರಾಣಗಳನ್ನು (ಪುರಾಣಗಳೆಲ್ಲ ಇತಿಹಾಸದ್ದೇ ಭಾಗವಾದರೂ) ಜಗತ್ತಿಗೆ ಸಂಶೋಧನೆಯಿಂದಲೇ ನಂಬಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಅದರಲ್ಲಿ ಇದೂ ಒಂದು.

 ನಾವೆಲ್ಲ ನಂಬಿದಂತೆ ಆಕಸ್ಮಿಕವಾಗಿ ಭೂಕಂಪನದಿಂದಲೇ ಸರಸ್ವತಿ ನದಿ ಕಾಣೆಯಾಗಿರಬಹುದು. ಮುಂದೆ  ನಮ್ಮ ಕಣ್ಣಮುಂದೆಯೇ ಗಂಗೆ ಯಮುನೆಯರು ಕೂಡ ಮಾಯವಾಗ ಬಹುದೇನೋ? ಯಾಕೆಂದರೆ ಗಂಗೆ, ಯಮುನೆ, ಬ್ರಹ್ಮಪುತ್ರ ಮುಂತಾದ ಹಿಮಾಲಯದಲ್ಲಿ ಹುಟ್ಟುವ ನದಿಗಳಿಗೆ ನೀರು ಒದಗಿಬರುವುದೇ ಹಿಮಾಲಯದಲ್ಲಿನ ಹಿಮದ ಕರಗುವಿಕೆಯಿಂದ. ಜಾಗತಿಕ ತಾಪಮಾನ ಹೆಚ್ಚಾದಂತೆ ಹಿಮದ ಕರಗುವಿಕೆ ಜಾಸ್ತಿಯಾಗಿ ಮುಂಬರುವ ೫೦-೬೦ ವರ್ಷಗಳಲ್ಲಿ ಮಂಜು ಸಂಪೂರ್ಣ ಕರಗಿಹೋದರೆ ನದಿಗಳಿಗೆ ನೀರೆಲ್ಲಿಂದ ಬರುತ್ತದೆ? ಮುಂದೊಂದುದಿನ ನದಿಗಳೂ ಮಳೆಯ ಮೇಲೆ ಅವಲಂಬಿತವಾಗುತ್ತವೆ. ಅತಿವೃಷ್ಟಿಯಲ್ಲಿ ಕೊಚ್ಚಿಹೋಗುವಂತೆ ಹರಿದು ಅನಾವೃಷ್ಟಿಯಲ್ಲಿ ಒಣಗಿದ ನದಿ ಪಾತ್ರೆಯನ್ನು ಕಾಣುವಂತಾಗುವುದಿಲ್ಲವೇ? ಆದರಿದು ಮಾನವನ ಸ್ವಯಂಕೃತ. ಇದರಲ್ಲಿ ಪ್ರಕೃತಿಯನ್ನು ದೂಷಿಸುವ ಯಾವುದೇ ಹಕ್ಕು ನಮಗಿಲ್ಲ. ಇದನ್ನು ತಡೆಯಲು ಅಥವಾ ಮುಂದೂಡಲು  ಸ್ಥಳೀಯರೊಂದಿಗೆ ಇಡೀ ಮನುಕುಲವು ಒಗ್ಗೂಡಬೇಕು. ಒಗ್ಗೂಡುವಿಕೆಯ ಸಾಧ್ಯಾಸಾಧ್ಯತೆಗಳು ಇನ್ನೂ ಪ್ರಶ್ನಾರ್ಥಕವಾಗಿಯೇ ಇದೆ. ಇಪ್ಪತ್ತೊಂದನೆಯ ಶತಮಾನವು ೩೦೦೦ ಸಾವಿರ ವರ್ಷದ ಹಳೆಯ ಗಂಗಾಬಯಲಿನ ನಾಗರಿಕತೆಗೆ ಮುಕ್ತಾಯ ಹಾಡಬಹುದು. ಮುಂದಿನ ಪೀಳಿಗೆಯವರು ನದಿಯ ಪ್ರಾಮುಖ್ಯತೆಯನ್ನೇ ಮರೆಯಬಹುದು. ಬೇಕಾದಷ್ಟು ಕಾಲವಲಂಬಿತವಾದ ನದಿಗಳು ಹುಟ್ಟಬಹುದು. ಆದರೆ  ಅವೆಲ್ಲ ಅಗಾಧ ಜನಸಂಖ್ಯೆಯ ದಬ್ಬಾಳಿಕೆಗೆ ತತ್ತರಿಸುವುದಿಲ್ಲವೇ? ಮುಂಬರುವ ಪೀಳಿಗಯವರು ನದಿಗಳನ್ನು ಕಾಪಾಡಿಕೊಳ್ಳುವಷ್ಟು ಯೋಗ್ಯರೇ? ಸಾಮರ್ಥ್ಯರೇ? ಹರಿದು ಹೋದ ಹರಪ್ಪ ನಾಗರಿಕತೆಯವರಿಗೆ ಹೊಸ ಗ್ರಾಮಗಳನ್ನೋ ಊರುಗಳನ್ನೋ ಕಟ್ಟಿಕೊಂಡು  (ಹೊಂದಿಕೊಂdu )ಸ್ಥಳ್ಳಾಂತರಿಸಲು ಸರಸ್ವತಿ, ಗಂಗೆಯಂಥ ನದಿ ಬಯಲುಗಳಿದ್ದವು. ಮುಂದೆ ಗಂಗೆ ಕಣ್ಮರೆಯಾದರೆ ಮತ್ಯಾರು ದಿಕ್ಕು

Thursday, November 6, 2025

ನದಿ

 ನದಿಗಳೆಂದರೆ ನನಗೆ ವಿಪರೀತ ಕುತೂಹಲ. ಬಾಲ್ಯದಿಂದಲೂ ಕಲಶಾರಾಧನೆಯ ಮಂತ್ರದಲ್ಲಿ ಸಪ್ತ ನದಿಗಳ ಆವಾಹನೆಯನ್ನು ಕೇಳಿದ್ದೇ ವಿನಾ ಅವುಗಳನ್ನು ನೋಡುವ ಅವಕಾಶ ಮದುವೆಯ ನಂತರವೇ. ನದಿಮೂಲ ಋಷಿಮೂಲ ಹುಡುಕಬಾರದೆಂಬ ಗಾದೆ ಇದ್ದರೂ, ಬಹುತೇಕ ನದಿಗಳು ಹಿಮಾಲಯದಲ್ಲೇ ಹುಟ್ಟಿ ಅಲ್ಲಿಂದಲೇ ಇಳಿಯುತ್ತವೆಯಂತೆ ಎಂದು ಕಥೆಗಳಲ್ಲಿ ಕೇಳಿದ್ದೆ. ಕಾವೇರಿ ನದಿ ಕೂಡ ಅದೆಲ್ಲೋ ಇದೆ ಎಂಬ ಭ್ರಮೆ ಅದನ್ನು ಕಣ್ಣಾರೆ ನೋಡುವವರೆಗೂ ಹೋಗಿರಲಿಲ್ಲ. ಚಿಕ್ಕಂದಿನಲ್ಲಿ ತಿರುಪತಿ ಬಿಟ್ಟರೆ ಬೇರೆ ಜಾಗ ನೋಡಿದ್ದೂ ಇಲ್ಲ. ಮಕ್ಕಳನ್ನೆಲ್ಲ ಅಷ್ಟಾಗಿ ಊರು ಸುತ್ತಿಸುತ್ತಿಲಿಲ್ಲ, ದೊಡ್ಡವರು ಕೂಡ ಅನಿವಾರ್ಯವಲ್ಲದೆ ಪ್ರಯಾಣವನ್ನೇ ಮಾಡುತ್ತಿರಲಿಲ್ಲ. ಊರಿನ ಸುತ್ತಮುತ್ತಲ ದೇವಸ್ಥಾನಕ್ಕೆ ಆಗಾಗ ಹೋಗಿಬರುವುದಿತ್ತು. ನಾಗಲಮಡಿಕೆಯ ಜಾತ್ರೆಗೆ ಹೋಗುತ್ತಿದ್ದದ್ದು ತುಂಬಾ ನೆನೆಪಿದೆ, ಅಲ್ಲಿ ಮಡೆ ಹೊರಳುವ ಪದ್ಧತಿ ಇದ್ದದ್ದರಿಂದ ನಾವು ಊಟಕ್ಕೆ ಕೈ ಹಾಕಿದ್ದೇ,ಎಲೆ ಗಳನ್ನು ಕಸಿದು ಕೊಂಡು ಹೋಗುತ್ತಿದ್ದರು. ಅಲ್ಲಿ  ಅಮ್ಮ ಇದು ಉತ್ತರ ಪಿನಾಕಿನಿ ನದಿ ಎಂದು ದೇವಸ್ಥಾನದ ಹಿಂಭಾಗ ತೋರಿಸುತ್ತಿದ್ದಳು. ಮಳೆ ನಮ್ಮಕಡೆ ಕಡಿಮೆಯಾದ್ದರಿಂದ ನದಿಯ ಕಾಲುವೆ ನಾ ನೋಡಿದಾಗಲೆಲ್ಲಾ ಒಣಗಿರುತ್ತಿತ್ತು.

    ಅದು ಬಿಟ್ಟರೆ ನಾ ಕಂಡ ಮೊದಲ ನದಿ ಶೃಂಗೇರಿಯ ತುಂಗೆ. ನಾನಗಲೇ ಪಿಯುಸಿ ಓದುತ್ತಿದ್ದೆ.  ಮನೆ ಮಂದಿಯೆಲ್ಲ ಹತ್ತುದಿನಗಳ ಪ್ರವಾಸ ಮಾಡಿದ್ದೆವು. ಹೈಸ್ಕೂಲ್ನಲ್ಲಿದ್ದಾಗ ಶಾಲಾ ಪ್ರವಾಸದಲ್ಲಿ ಶೃಂಗೇರಿಗೆ ಹೋಗಿದ್ದರೂ, ಅಲ್ಲಿ ತುಂಗೆಯನ್ನು ನಮಗೆ ತೋರಿಸಿ ಹೇಳುವವರ್ಯಾರಿದ್ದರು? ಮುಂದಿನ ಊರಿಗೆ ಹೋಗುವ ಆತುರವಷ್ಟೇ. ಆಗ ಧರ್ಮಸ್ಥಳದ ನೇತ್ರಾವತಿಯನ್ನು ಬಸ್ಸಿನಿಂದಲೇ ತೋರಿಸಿದ್ದರು. ಆನಂತರ ನೋಡಿದ್ದು ಕಾವೇರಿಯನ್ನು. ಆಶ್ಚರ್ಯವೆಂದರೆ ಮೊದಲು ಭಾಗಮಂಡಲ ನೋಡಿದಮೇಲೆ ಶ್ರೀರಂಗಪಟ್ಟಣದಲ್ಲಿ ಕಾವೇರಿಯನ್ನು ನೋಡಿದ್ದು. ಪತ್ರಿಕೆಗಳಲ್ಲಿ ಕಾವೇರಿಯ ವಿವಾದವನ್ನು ಅತಿಯಾಗಿ ಓದುತ್ತಿದ್ದವಳಿಗೆ ಭಾಗಮಂಡಲಕ್ಕೆ ಹೋದಾಗ ನಮ್ಮ ಕಾವೇರಿಯೆಂಬ ಹೆಮ್ಮೆಯ ಅನುಭೂತಿ ಮರೆಯಲಾಗದ್ದು. ನನ್ನ ಮಗಳು ಹುಟ್ಟಿದ ಮೇಲೆ ಪ್ರವಾಸಗಳ ಸುವರ್ಣಯುಗ. ಮೈಸೂರು ಸುತ್ತಮುತ್ತ ಬೇಕಷ್ಟು ಬಾರಿ ಸುತ್ತಿದ್ದೇವೆ.  ಸುತ್ತಮುತ್ತ ರಾಜ್ಯಗಳ ಸ್ಥಳಗಳಿಗೆ ಪ್ರವಾಸಗಳೂ ಒದಗಿಬಂದವು. ಗೋದಾವರಿಯ ದರ್ಶನವೂ ಭದ್ರಾಚಲದ ರಾಮನ ಅನುಗ್ರಹದಿಂದ. 

         ೨೦೨೧ರ ವರೆಗೂ ನಾ ನೋಡಿದ್ದು , ಕಾವೇರಿ, ತುಂಗೆ, ನಂಜನಗೂಡಿನ ಕಪಿಲ, ಜೋಗಿನ ಶರಾವತಿ ಮತ್ತು ನೇತ್ರಾವತಿ. ಶ್ಲೋಕದಲ್ಲಿ ಬರುವ ಸಪ್ತ ನದಿಗಳ ಪಟ್ಟಿಯಲ್ಲಿ ಕಾವೇರಿ ಮತ್ತು ಗೋದಾವರಿಯಷ್ಟೇ. ೨೦೨೧ರಲ್ಲಿ ಶ್ರೀರಾಮ ಪಟ್ಟಾಭಿಷೇಕಕ್ಕಾಗಿ ಗಂಗೆಯನ್ನು ತರುವ ಮನಸ್ಸಾಯಿತು. ಮನೆಯಲ್ಲಿ ಗಂಗೆ ತಂಬಿಗೆಯಲ್ಲಿ ಇದ್ದರೂ(ಅಮ್ಮ ಕಾಶಿಗೆ ಹೋದಾಗ ತಂದಿದ್ದು) , ಹರಿದ್ವಾರದಿಂದ ನದಿ ನೀರು ಮತ್ತು ಮೃತ್ತಿಕೆ ತರಲು ಹೋದೆವು. ಅದೇನೋ ದೆಹಲಿ ಏರ್ಪೋರ್ಟ್ನಲ್ಲಿ ಅಯೋಧ್ಯೆಗೆ ಹೋಗಿ ಸೀತಾ ಕುಂಡದಿಂದ (ರಾಮನ ಪಟ್ಟಾಭಿಷೇಕಕ್ಕಾಗಿ ವಾನರರು ಸಂಗ್ರಹಿಸಿದ ಸಪ್ತ ಸಾಗರದ ಮತ್ತು ಸಪ್ತ ನದಿಗಳ ಜಲ) ನೀರು ತರುವ ಪ್ರೇರಣೆಯಾಗಿ,  ಅಲ್ಲಿಂದಲೇ ಲಕ್ನೋಗೆ ಹೋಗಿದ್ದೆವು. ಅಯೋಧ್ಯೆಯನ್ನು ಸುತ್ತುವರಿಯುವ ಸರಯು ನದಿ ದರ್ಶನ ಮತ್ತು ಮೃತ್ತಿಕಾ ಸ್ನಾನವೊಂದು ವಿಶೇಷ ಅನುಭವ. ಆನಂತರ ಹರಿದ್ವಾರದಲ್ಲಿ ಗಂಗಾ ದರ್ಶನ. ಹರಿದ್ವಾರವನ್ನು ಏಳುಬಾರಿ ಸುತ್ತುವ ಗಂಗೆ, ಹರ್ ಕಿ ಪೌಡಿಯಲ್ಲಿ ಧಡ ಧಡ ಹರಿಯುವುದನ್ನು ನೋಡಿ ಚಕಿತಳಾಗಿದ್ದೆ. ಹಿಮಾಲಯ ಬಿಟ್ಟು ಮುನ್ನೂರು  ಕಿಲೋಮೀಟರ್ ಬಂದರೂ ನದಿಯು ಮಂಜಿನಂಥ ತಣುವನ್ನು ಉಳಿಸಿಕೊಂಡಿರುವುದು ಬಲು ಆಶ್ಚರ್ಯ, ಅದೂ ಹರಿದ್ವಾರದ ಕೆಟ್ಟ ಬಿಸಿಲಿನಲ್ಲಿ.

೨೦೨೩ರಲ್ಲಿ ವಾರಣಾಸಿಯಲ್ಲಿ ಗಂಗೆಯನ್ನು ನೋಡಿ ಎಲ್ಲಾ ನದಿಗಳನ್ನೂ ನೋಡಿದಷ್ಟೂ ತೃಪ್ತಿ. ಪ್ರಯಾಗರಾಜ್ ನಲ್ಲಿ ಗಂಗೆ ಯಮುನೆ ಮತ್ತು ಸರಸ್ವತಿಯ ಸಂಗಮವನ್ನು ನೋಡಿಬಂದೆವು. ಮತ್ತೆ ೨೦೨೪ರಲ್ಲಿ ವಿಶ್ವನಾಥನ ಅನುಗ್ರಹವೇ, ಚಾರ್ಧಾಮ್ ಯಾತ್ರೆಯ ಸಂಕಲ್ಪ. ಹರಿದ್ವಾರದಿಂದ ಗಂಗಾ ಸ್ನಾನ ಮಾಡಿಯೇ ಯಾತ್ರೆ ಪ್ರಾರಂಭವಾಗಿದ್ದು. ಯಾತ್ರೆಯ ಭಾಗವಾಗಿ ಬದರಿ ನಾರಾಯಣನ ದರ್ಶವಷ್ಟೇ ಪ್ರಾಪ್ತವಾಗಿದ್ದು. ಆದರೆ, ಬದ್ರಿಗೆ ಹೋಗುವ ದಾರಿಯಲ್ಲಿ ಗಂಗೆಯ ಸೇರುವ ಮಂದಾಕಿನಿ, ಅಲಕಾನಂದ, ಭಾಗೀರಥಿ ನದಿಗಳನ್ನೂ ಮತ್ತವರ ಸಂಗಮಗಳನ್ನು ದರ್ಶಿಸುವ ಭಾಗ್ಯ ನಮ್ಮದಾಗಿತ್ತು.ಜೊತೆಗೆ ಪಂಚ ಕೇದಾರಗಳಲ್ಲಿ ಒಂದಾದ ತುಂಗನಾಥ, ಕಲ್ಪೇಶ್ವರ ,ಓಂಕರೇಶ್ವರ ಮತ್ತು ಗೋಪೇಶ್ವರದಂಥ ಅಪರೂಪದ ಈಶ್ವರನ ಸನ್ನಿಧಾನಗಳನ್ನು ನೋಡಿ ಧನ್ಯರಾಗಿದ್ದೊಂದು ಭಾಗ್ಯ.

  ೨೦೨೫ರ ಯಾತ್ರೆ ಸಂಪೂರ್ಣ ಚಾರ್ಧಾಮ ಯಾತ್ರೆ. ಗಂಗೋತ್ರಿ ಯಮುನೋತ್ರಿ ಭೇಟಿ ನನ್ನ ನದಿಮೂಲದ ಕುತೂಹಲಕ್ಕೆ ಉತ್ತರ. ಗಂಗೋತ್ರಿಯಲ್ಲಿ ಭಗೀರಥ ತಪಸ್ಸು ಮಾಡಿದ ಜಾಗವಿದೆ. ಯಾರ ಹಂಗಿಲ್ಲದೆ ತನ್ನಿಷ್ಟಬಂದಂತೆ ಪರ್ವತಗಳ ಬಳಸಿ ಹರಿಯುವ ಭಾಗೀರಥಿಯನ್ನು  ಕಣ್ಣುತುಂಬಿಕೊಂಡಿದ್ದು ಜನ್ಮಕ್ಕೆ ಇಷ್ಟು ಸಾಕು. ಬಿಳುಪೇನು? ಬಳುಕೇನು? 

 ಯಮುನೆಯೂ ಪರ್ವತದ ಇರುಕುಗಳಲ್ಲಿ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲ ನುಗ್ಗಿ ಬರುತ್ತಾಳೆ. ವಯ್ಯಾರದಲ್ಲಿ, ರಭಸದಲ್ಲಿ ಭಾಗೀರಥಿಗಿಂತ ಕಡಿಮೆಯೇನಲ್ಲ. ಕೃಷ್ಣನ ಪಾದ ಸೋಕಲು ಮಥುರೆಗೆ ಓಡೋಡಿ ಬರುವ ಯಮುನೆಯ ಸೊಗಸು ವರ್ಣನೆಗೆ ಮೀರಿದ್ದು. ಇನ್ನು ಮಂದಾಕಿನಿಯು ಅದೆಲ್ಲಿ ಹುಟ್ಟುವಳೋ!!(ರೂಪ ಕುಂಡದ ಬಳಿ ಅಂತೆ) ಕೇದಾರನಾಥವೆಂಬ ಕೈಲಾಸದಲ್ಲಿ ಸದಾ ಈಶ್ವರನ ಸಾನಿಧ್ಯದಲ್ಲಿರುವವಳು. ಮಂದಾಕಿನಿಯ ನಡೆ ಲಯಬದ್ಧ, ಒಂದೇ ತೆರನಾದ ಹರಿವು. ಅದು  ಓಂ ನಮಃ ಶಿವಾಯ ಪಂಚಾಕ್ಷರಿಯನ್ನು ಸಮಾನ ಗತಿಯಲ್ಲಿ ಧ್ಯಾನಿಸಿದಂತೆ. ನಾವು ಗೌರಿಕುಂಡದಿಂದ ಬದರಿ ದಾರಿ ಹಿಡಿದರೆ ನಮ್ಮನ್ನು ಬೀಳ್ಕೊಡಲು ರುದ್ರಪ್ರಯಾಗದವರೆಗೂ ಬರುತ್ತಾಳೆ. 

ಅಲಕಾನಂದ ನದಿ ತಟದಲ್ಲಿಯೇ ಬದರಿ ನಾರಾಯಣನ ಸನ್ನಿಧಿ. ನರ ನಾರಾಯಣ ಪರ್ವತಗಳು ದೇವಾಲಯವನ್ನು ಆವರಿಸಿದಂತೆ ಕಾಣುತ್ತವೆ. ಬದರಿನಾಥ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ  ತಲೆ ಎತ್ತಿ ನೋಡಿದಲ್ಲೆಲ್ಲಾ ಬೆಳ್ಳಿ ಬೆಟ್ಟಗಳು.

ಬದರಿಯಲ್ಲಿ ಎರಡು ನದಿಗಳನ್ನು ನೋಡಬಹುದು, ಅಲಕಾನಂದ ಮತ್ತು ಸರಸ್ವತಿ. ಸರಸ್ವತಿ ನದಿ ಇಲ್ಲಿ ಮಾತ್ರ ನೋಡಲು ಸಾಧ್ಯ. ಸರಸ್ವತಿಯು ಗುಪ್ತಗಾಮಿನಿಯಾಗಿ ಪ್ರಯಾಗ್ರಾಜ್ ತ್ರಿವೇಣಿ ಸಂಗಮ ಸೇರುವಳು. ಅದಕ್ಕೂ ಮುನ್ನ ಬದರಿಯಲ್ಲೇ (ಮಾನ ಎಂಬ ಹಳ್ಳಿಯಲ್ಲಿ) ಕೇಶವ ಪ್ರಯಾಗದಲ್ಲಿ ಅಲಕನಂದೆಯೊಂದಿಗೆ ಲೀನವಾಗುತ್ತಾಳೆ.

 ಅಲಕಾನಂದ ಹುಟ್ಟುವುದೂ ಹಿಮಾಲಯದ ಸತೋಪಂತ್ ಎಂಬ ಹಿಮವತ್ಪರ್ವತದಿಂದ. ಅವಳನ್ನು ಸೋಕಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ತಣ್ಣಗಿರುತ್ತಾಳೆ. ನರ ನಾರಾಯಣ ಪರ್ವತದ ತಪ್ಪಲಲ್ಲಿ ನದಿ ಸಮೇತ ದೇವಾಲಯವನ್ನು ನೋಡುವುದು ಕಣ್ಣಿಗೊಂದು ಕಾಣಿಕೆ. ಇವಳೂ ನಮ್ಮನ್ನು ಹರಿದ್ವಾರಕ್ಕೆ ಹಿಂದಿರುಗುವಾಗ ವಿಷ್ಣುಪ್ರಯಾಗದವರೆಗೂ ಹಿಂಬಾಲಿಸಿ ದೌಲಿ ಗಂಗೆಯನ್ನು ಸೇರಿಸಿಕೊಂಡು ಮತ್ತೆ  ರುದ್ರಪ್ರಯಾಗದಲ್ಲಿ ಮಂದಾಕಿನಿಯೊಡನೆ ಸಂಗಮವಾಗುತ್ತಾಳೆ. ಅಂತೂ ಶಿವಕೇಶವ ರನ್ನು ನೋಡಿದೆ, ಗಂಗೆಯಾಗಿ ಹರಿಯುವ ಮಂದಾಕಿನಿ ,ಅಲಕಾನಂದ, ಪಿಂಡಾರಿ, ಭಗೀರಥಿ ನದಿಗಳಲ್ಲೂ ನೋಡಿದೆ. ಗಂಗೆ ಯಮುನೆಯರ ಉಗಮ ಸ್ಥಾನ ನೋಡಿದೆ, ಹಿಮಾವತ್ ಪರ್ವತಗಳನ್ನು ನೋಡಿದೆ. ಇವೆಲ್ಲವುಗಳ ಮೋಹಕ ನೋಟ  ಪ್ರಯಾಣದ ಆಯಾಸವನ್ನು, ಉಪವಾಸಗಳ ಉಬ್ಬರವನ್ನು ಹೀರುತ ಯಾತ್ರೆಯನ್ನು ಅವಿಸ್ಮರಣೀಯವಾಗಿಸಿತು. ಎಲ್ಲಾ ನದಿಗಳ ನೀರಿನೊಂದಿಗೆ ಧನ್ಯಯತೆಯನ್ನು ಹೊತ್ತು ಮನೆಸೇರಿದೆವು.