ಬೆಳಗಿನ ಜಾವಕ್ಕೆ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬಸ್ ಹಿಡಿದು ಮೈಸೂರು ಮಾರ್ಗವಾಗಿ ನಂಜನಗೂಡು ದೇವಸ್ಥಾನಕ್ಕೆ ಸೇರಲು ೯ ಗಂಟೆಯೇ ಆಗಿತ್ತು. ಸರತಿ ಸಾಲು ದೊಡ್ಡದೇನೂ ಇರಲಿಲ್ಲ. ಸಾಲಿನಲ್ಲಿ ಐದು ನಿಮಿಷದೊಳಗೆ ದರ್ಶನವಾಗಿ, ಮಂಗಳಾರತಿ ಕಣ್ಣಿಗೊತ್ತಿಕೊಂಡು ಹೊರ ಬಂದು ಅಮ್ಮನವರ ದರ್ಶನದ ಸಾಲು ಸೇರಿದೆ. ಅಲ್ಲಿ ಇನ್ನೂ ಪೂಜೆ ನಡೆಯುತ್ತಿದ್ದರಿಂದ ಪರದೆ ಇಳಿ ಬಿಟ್ಟಿದ್ದರು. ಆ ಕ್ಷಣಕ್ಕೆ ಇನ್ನೊಮ್ಮೆ ಈಶ್ವರನ ದರ್ಶನ ಮಾಡೋಣೆನಿಸಿ ಮತ್ತೆ ಸರತಿ ಸಾಲು ಸೇರಿದೆ. ಆಗ ‘ಅಯ್ಯೋ!! ನಾನು ದೇವರನ್ನು ಏನೂ ಕೇಳಿ ಕೊಳ್ಳಲಿಲ್ಲವಲ್ಲ! ಸುಮ್ನೆ ಶ್ಲೋಕ ಹೇಳ್ಕೊಂಡು ಬಂದೆ..ಈ ಸಾರಿ ಹೋಗಿ ಕೇಳಿ ಕೊಳ್ಳೋಣ’ ಅನ್ನಿಸಿ ಸಾಲಿನಲ್ಲಿ ಮುಂದುವರಿದೆ. ಅಭ್ಯಾಸ ಬಲದಿಂದ ಶಿವ ಪಂಚಾಕ್ಷರಿ ಬಾಯಿ ಜಪಿಸುತ್ತಿತ್ತು. ಮನಸ್ಸು ಬೇಡಿಕೆಗಳ ಪಟ್ಟಿ ಮಾಡ ತೊಡಗಿತು. ದೇವರೇ ‘ ನನಗೆ ಆರೋಗ್ಯ ಕೊಡಪ್ಪ, ನನ್ನ ಮಕ್ಕಳಿಗೆ ಆಯಸ್ಸು ಆರೋಗ್ಯ ವಿದ್ಯಾಬುದ್ಧಿ ಕೊಡು, ನನ್ನ ಗಂಡನಿಗೂ ಆರೋಗ್ಯ ಆಯಸ್ಸು ಕೊಡು. ಹಂಗೆ ಅವರ ಪ್ರಮೋಷನ್ ನೋಡ್ಕೋ. ಇತ್ತೀಚೆಗೆ ಅಮ್ಮನಿಗೂ ಆರೋಗ್ಯ ಸರಿ ಇರಲ್ಲ..ಅಮ್ಮನಿಗೇನೂ ಆಗದಂಗೆ ನೋಡ್ಕೋ..ನನ್ನ ಮಗಳ ಹತ್ತನೇ ಕ್ಲಾಸ್ ಪಾರುಗಾಣಿಸು. ಹುಡುಗರಿಗೆ ಹೆಂಗಾದ್ರೂ ಜವಾಬ್ದಾರಿ ಬಂದರೆ ಸಾಕು. ಮಗನಿಗೊಂದು ಉಪನಯನ ಮಾಡ್ಬೇಕು. ಗುರುಬಲ ಬರೋಹಾಗೊ ಮಾಡು.ನನ್ನ ತಮ್ಮನಿಗೆ…ಅವನ ಮಗುಗೇ…ತಂಗಿಗೇ…ಅವರಿಗೆ..ಇವರಿಗೆ… ಯಾವುದು ಕೇಳೋದು. ಯಾವುದು ಬಿಡೋದು’ ಮನಸ್ಸಂತೂ ತಡಬಡಿಸಿತು.. ಬಗೆಹರಿಯೋ ಹಾಗೆ ಕಾಣೆ . ನಾನು ವಾಸ್ತವಕ್ಕೆ ಬರುವ ಸಮಯಕ್ಕಾಗಲೇ ಗರ್ಭಗುಡಿ ದಾಟಿ ಸಾಲಿನಿಂದ ಹೊರಗಿದ್ದೇನೆ. ತುಟಿಯಂತೂ ‘ತಸ್ಮೈ ನಕಾರ’ ವೇ ಒದರುತ್ತಿದೆ. ಅರೆ! ದರ್ಶನವಾಯ್ತಾ? ಅನ್ನಿಸಿತು. ಶಿವನಿಗೆ ಬೇರೆ ಅಲಂಕಾರ ಮಾಡಿದ್ದರೇನೋ ನೋಡ್ಲಿಲ್ಲವೇ?
ನನಗಿದೆಂಥ ಅಲೋಚನೆ ಬಂತು? ಸಾಮಾನ್ಯವಾಗಿ ಚಿಕ್ಕವಳಿದ್ದಾಗಲೂ ಅಷ್ಟೆ, ದೇವರಿಗೆ ಬರೀ ಶ್ಲೋಕ ಹೇಳೋದು, ಮಂಗಳಾರತಿ ತಗೊಂಡು, ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡೋದಷ್ಟೆ. ಮನೆಯಲ್ಲಿನ ಪೂಜೆಗಾದರೂ, ಗೊತ್ತಿರೋ ದೇವರನಾಮ ಗುನುಗುತ್ತಾ ಅದರ ಸಾಹಿತ್ಯವನ್ನು ಅನುಭವಿಸುತ್ತಾ..ಪೂಜೆ ಮುಗಿಸುತ್ತಿದ್ದೆ. ದೇವರಲ್ಲಿ ಬೇಡಿಕೊಂಡೇ ಇಲ್ಲ! ನನಗಿದೆಂಥ ಅಹಂಕಾರ ! ಅಹಂಕಾರವಲ್ಲ…ಆದರೂ ಆ ಅಭ್ಯಾಸವಿಲ್ಲ. ದೇವರನ್ನ ಕೇಳ್ಕೋ ಬೇಕು.. ಕೇಳದಿದ್ದರೆ ಹೇಗೆ ಕೊಡ್ತಾನೆ? ಹೀಗೊಂದು ತರ್ಕ. ಆದರೂ ದೇವರನ್ನ ಮನಸಾರೆ ನೋಡ್ದೇ ಬರೀ ಏನು ಕೇಳ್ಕೋ ಬೇಕಂತ ಲೆಕ್ಕಚಾರ ಹಾಕಿದ್ರೆ? ಅದೆಲ್ಲಾ ಅವನಿಗೇ ಬಿಟ್ಟಿದ್ದು. ಅವನೇ ಕೊಡ್ತಾನೆ ‘ ಶಿವ ಕೊಡದಿದ್ದು ಸಿಂಗಲೀಕ ಕೊಡ್ತಾನ್ಯೇ?’ ಹೀಗೊಂದು ತರ್ಕ. ಈ ಸಾರಿ ಕೇಳಿ ತಗೊಳ್ಳೋ ಉಸಾಬರಿಯೇ ಬೇಡ, ತೆಪ್ಪಗೆ ದರ್ಶನ ಮಾಡಿ ಕೊಂಡು ಬರೋಣವೆಂದು ಮೂರನೇ ಬಾರಿಗೆ ಸಾಲಿನಲ್ಲಿ ನಿಂತು ಮುಂದುವರಿದೆ. ಆಗತಾನೆ ಅಭಿಷೇಕ ಮಾಡಿಸಿಕೊಂಡಿದ್ದ ಲಿಂಗ ಫಳಫಳ ಹೊಳೆಯುತ್ತಿತ್ತು. ಲಿಂಗದ ಮೇಲಿನ ಧಾರಪಾತ್ರೆಯಿಂದ ಸಣ್ಣಗೆ ನೀರಿನ ಧಾರೆ…ಲಿಂಗದ ತಲೆ ಮೇಲಿನ ಮಂದಾರ ಪುಷ್ಪವನ್ನು ತೋಯಿಸುತ್ತಿತ್ತು. ಬೆಳ್ಳಿಯ ವಿಭೂತಿ ಪಟ್ಟಿ. ಸ್ವಲ್ಪ ಬಲಕ್ಕೆ ವಾಲಿದಂತಿರುವ ಪಾಣಿವಾಟಕ್ಕೆ ಬಲ್ವಹಾರ..ಮತ್ತೊಂದು ಮಲ್ಲಿಗೆ ಹಾರ…ಅವನು ಗಂಗಾಧರ ಶಂಕರ ಕರುಣಾಕರನೇ. ಬೇಕಾದ್ದು ಕೊಟ್ಟೇ ಕೊಡುತ್ತಾನೆಂಬ ಭರವಸೆ..ಆದರೂ ನಂದಿ ಧ್ವಜದ ಬಳಿ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡುವಾಗ…ಯಾವುದ್ಹೆಂಗಾದರೂ ಸರಿ ಅಮ್ಮನ ಆರೋಗ್ಯವೊಂದಾದರೂ ನೋಡ್ಕೋ ..ನೀನೆೇ ಧನ್ವಂತ್ರಿ.
No comments:
Post a Comment